ಕುಷ್ಟಗಿ: ಅಪಘಾತದಲ್ಲಿ ಎಡಗಾಲು ಮುರಿದುಕೊಂಡ ವಿದ್ಯಾರ್ಥಿ ಚಂದ್ರಶೇಖರ ಮೆಣದಾಳ ಇಂದು ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಶಿಕ್ಷಣ ಶ್ತ್ರಾಸ ವಿಷಯ ಪರೀಕ್ಷೆ ಬರೆದು ಗಮನ ಸೆಳೆದರು.
ತಾಲ್ಲೂಕಿನ ನಂದಾಪೂರ ಗ್ರಾಮದ ಚಂದ್ರಶೇಖರಗೆ ಕಾಲು ಮಡಚಲು ಬಾರದ ಸ್ಥಿತಿಯಿದೆ. ಟಂಟಂ ವಾಹನದಲ್ಲಿ ಬೆಡ್ ಮತ್ತು ದಿಂಬು ತೆಗೆದುಕೊಂಡು ಕಾಲು ಚಾಚಿಕೊಂಡು ಕೇಂದ್ರಕ್ಕೆ ಬಂದರು. ಸಹಾಯಕರೊಂದಿಗೆ ಪರೀಕ್ಷಾ ಕೊಠಡಿ ತನಕ ಹೋಗಿ ಹಾಸಿಗೆ ಮೇಲೆಯೇ ತಲೆದಿಂಬು ಇಟ್ಟುಕೊಂಡು ಪರೀಕ್ಷೆ ಬರೆದಿದ್ದು ವಿಶೇಷ.
ನಂತರ ಮಾತನಾಡಿದ ಚಂದ್ರಶೇಖರ ‘ಪ್ರತಿ ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಮಹತ್ವದ ಘಟ್ಟವಾಗಿದ್ದು, ಅನಿರೀಕ್ಷಿತವಾಗಿ ಅಪಘಾತವಾಗಿದೆ. ಇದೊಂದೇ ಕಾರಣಕ್ಕೆ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಳ್ಳುವುದು ಇಷ್ಟವಿರಲಿಲ್ಲ’ ಎಂದರು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಎಸ್.ಎಸ್. ಪೋರೆ, ಸಹ ಮುಖ್ಯ ಅಧೀಕ್ಷಕ ಕೊಟ್ರೇಶಪ್ಪ , ಜಾಗೃತ ದಳದ ಸಿಬ್ಬಂದಿ ವಿದ್ಯಾರ್ಥಿಗೆ ನೆರವಾದರು.