ಮಂಗಳೂರು: ಹಿಮಾಚಲ ಪ್ರದೇಶದಿಂದ ಗಾಂಜಾ ಮತ್ತು ಅದರಿಂದ ತಯಾರಿಸಿದ ಚರಸ್ ಅನನು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಸೆನ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಾರ್ಕಳದ ಬಜಗೋಳಿ ನಿವಾಸಿ ಸುಕೇತ್ ಕಾವಾ ಅಲಿಯಾಸ್ ಚುಕ್ಕಿ (೩೩), ಪುಲ್ಕೇರಿಯ ಸುನಿಲ್ (೩೨) ಹಾಗೂ ತಮಿಳುನಾಡು ಕೊಯಮತ್ತೂರಿನ ಅರವಿಂದ ಕೆ. (೨೪) ಎಂದು ಗುರುತಿಸಲಾಗಿದೆ. ಆರೋಪಿ ಸುಕೇತ್ ಕಾವಾ ಎಂಬಾತ ಹಿಮಾಚಲ ಪ್ರದೇಶದಲ್ಲಿ ಪ್ರವಾಸಿ ಗೈಡ್ ಆಗಿದ್ದು, ಅರವಂದ್ ಕಾಸ್ಟ್ಯೂಮ್ ಡಿಸೈನರ್ ಆಗಿ ಹಾಗೂ ಸುನಿಲ್ ಕಾರು ಚಾಲಕ ವೃತ್ತಿಯನ್ನು ನಿರ್ವಹಿಸುತ್ತಿದ್ದಾನೆ.
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಾರ್ವತಿ ವ್ಯಾಲಿ ಎಂಬಲ್ಲಿನ ೩೦೦ಕ್ಕೂ ಅಧಿಕ ಹಳ್ಳಿಗಳಿರುವ ಗುಡ್ಡಗಾಡು ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುವ ನಿಷೇಧಿತ ಗಾಂಜಾ ಹಾಗೂ ಗಾಂಜಾದಿಂದ ತಯಾರಿಸಿದ ಚರಸ್ ಅನ್ನು ತಾವು ಟ್ರಕ್ಕಿಂಗ್ಗೆ ಬಂದವರು, ಪ್ರವಾಸಿಗರು, ಗೈಡ್ ಎಂದು ನಂಬಿಸಿ ಕಡಿಮೆ ಹಣಕ್ಕೆ ಪಡೆದು, ರೈಲಿನ ಮೂಲಕ ಮಂಗಳೂರಿಗೆ ಈ ಆರೋಪಿಗಳು ತರಿಸಿಕೊಳ್ಳುತ್ತಿದ್ದರು. ಇಲ್ಲಿ. ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು, ಸಾವರ್ಜನಿಕರಿಗೆ ಪೂರೈಸಿ ಹಣ ಸಂಪಾದಿಸುತ್ತಿದ್ದರು. ಈ ಜಾಲದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸೆನ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು
ಬಂಧಿಸಿದ್ದಾರೆ. ಅವರಿಂದ ೫೦೦ ಗ್ರಾಂ ತೂಕದ ಚರಸ್, ೧ ಕೆಜಿ ತೂಕದ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ ರಿಡ್ಜ್ ಕಾರು ಹಾಗೂ ಮೊಬೈಲ್ ಸೇರಿದಂತೆ ೮ ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್, ಎಸಿಪಿ ರವೀಶ್ ನಾಯ್ಕ್ ಉಪಸ್ಥಿತರಿದ್ದರು.