ಮಾಲತೇಶ ಹೂಲಿಹಳ್ಳಿ
ಹುಬ್ಬಳ್ಳಿ: ಚೋಟಾ ಮುಂಬೈ ಎಂದೇ ಖ್ಯಾತಿ ಪಡೆದಿರುವ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲೂ ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿ, ಸಾಲ ನೀಡುವ ಆ್ಯಪ್, ಅಶ್ಲೀಲ ಫೋಟೊ ಬೆದರಿಕೆ, ವಿವಿಧ ಬಹುಮಾನದ ಹೆಸರಿನ ವಂಚನೆ, ಮನೆ ಬಾಡಿಗೆ, ಮಾರಾಟ, ಸೈನಿಕರು, ವೈದ್ಯರು ಸೇರಿದಂತೆ ಎಲ್ಲ ವರ್ಗದವರೂ ಸೈಬರ್ ವಂಚನೆ ಜಾಲಕ್ಕೆ ಸಿಕ್ಕಿ ನಲುಗಿದ್ದಾರೆ. ಮತ್ತೊಂದೆಡೆ ಪೊಲೀಸರಿಗೆ ತಲೆನೋವಾಗಿದೆ. ೨೦೨೨-೨೦೨೩ ಎರಡು ವರ್ಷಗಳಲ್ಲಿ ೧೨.೩೬ ಕೋಟಿ ವಂಚನೆ ಜಿಲ್ಲೆಯಲ್ಲಿ ನಡೆದಿದೆ.
ಇದು ಸಣ್ಣ ಮೊತ್ತವೇನೂ ಅಲ್ಲ. ಬದಲಾಗಿ ಸಾರ್ವಜನಿಕರು ಇದರಿಂದ ಕಲಿಯುವ ಪಾಠ ಮಾತ್ರ ಸಾಕಷ್ಟಿದೆ. ೨೦೨೨ ರಲ್ಲಿ ೩೫೭ ಪ್ರಕರಣಗಳು ಎಫ್ಐಆರ್ ಆಗಿದ್ದು, ೬,೦೯ ಕೋಟಿ ಹಣ ಅಪರಿಚಿತ ವಂಚಕರ ಪಾಲಾಗಿದೆ. ೨೦೨೩ ರಲ್ಲಿ ೨೧೦ ಪ್ರಕರಣಗಳು ಎಫ್ಐಆರ್ ಆಗಿದ್ದು, ೬.೨೭ ಕೋಟಿ ವಂಚಕರ ಪಾಲಾಗಿದೆ. ೨೦೨೩-೨೪ನೇ ಸಾಲಿನ ನವೆಂಬರ್ ತಿಂಗಳ ಆರಂಭದಲ್ಲಿಯೇ ೪೦೦ ಪ್ರಕರಣಗಳು ಎಫ್ಐಆರ್ ಆಗಿದ್ದು, ಐದಾರು ಕೋಟಿ ಹಣ ಕಳೆದುಕೊಂಡಿದ್ದಾರೆ.
ಅಂತರ್ಜಾಲ ದುರ್ಬಳಕೆ ಮಾಡಿಕೊಂಡು, ಬೇರೆ ಬೇರೆ ಮಾರ್ಗಗಳ ಮೂಲಕ ಜನಸಾಮಾನ್ಯರನ್ನು ವಂಚಿಸುವುದನ್ನು ಕರಗತ ಮಾಡಿಕೊಂಡಿರುವ ವಂಚಕರ ಕೃತ್ಯದಿಂದ ಹಲವರು ಹಣ ಕಳೆದುಕೊಂಡಿದ್ದಾರೆ. ನಂಬಿಕೆ ದ್ರೋಹದಿಂದ ಆದ ಮೋಸ ಸಹಿಸಲಾಗದೇ ಮತ್ತು ಕಳೆದುಕೊಂಡ ಹಣವನ್ನೂ ಪಡೆಯಲಾಗದೇ ಕೆಲವರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ.
ಮಾನ-ಮರ್ಯಾದೆ ಹೋಗುವುದೆಂದು ಇತ್ತ ಸೈಬರ್ ಪೊಲೀಸರಿಗೆ ಹೇಳಲಾಗದೆ, ಇತ್ತ ಆಪ್ತರೊಂದಿಗೂ ಮುಕ್ತವಾಗಿ ಮಾತನಾಡಲಾಗದೆ ಹಲವರು ನೋವು, ಅವಮಾನ ಸಹಿಸಿಕೊಂಡು ಬದುಕುತ್ತಿದ್ದಾರೆ. ಸೈಬರ್ ಜಾಲ ವಿಸ್ತಾರವಾದಷ್ಟು, ಅಪರಾಧ ಪ್ರಕರಣಗಳು ಲೆಕ್ಕಕ್ಕೆ ಸಿಗದಷ್ಟು ದಾಖಲಾಗುತ್ತಿವೆ. ಅಸಲಿ ಎನ್ನುವ ಮಟ್ಟಿಗೆ ನಕಲಿ ಮತ್ತು ತಿರುಚಿದ ವಿಡಿಯೊ, ವೆಬ್ಸೈಟ್ಗಳು ಸೃಷ್ಟಿಯಾಗುತ್ತಿವೆ.
ಈ ರೀತಿ ನಡೆಯುತ್ತದೆ ವಂಚನೆ….:
ಬಿಟ್ ಕಾಯಿನ್ ಕಂಪನಿಯಲ್ಲಿ ಹಣ ಹೂಡಿಕೆ, ಒಟಿಪಿ, ಡೆಬಿಟ್-ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್, ಲಿಂಕ್ ಕಳುಹಿಸಿ ವಂಚನೆ, ಉಡುಗೊರೆ ಆಮಿಷ, ಎನಿಡೆಸ್ಕ್, ಟೀಮ್ ವ್ಯೂವರ್ ಸಪೋರ್ಟ್, ಆನ್ಲೈನ್ ಲೋನ್ ಸೇರಿ ಹಲವು ಸ್ವರೂಪಗಳಲ್ಲಿ ವಂಚಕರು ಹಣ ಸುಲಿಗೆ ಮಾಡುತ್ತಾರೆ. ವೈದ್ಯ, ಎಂಜಿನಿಯರ್, ಅಧಿಕಾರಿಗಳು, ವ್ಯಾಪಾರಸ್ಥರು ಸೇರಿ ಬೇರೆ ಬೇರೆ ಕ್ಷೇತ್ರದವರು ಮೋಸಕ್ಕೆ ಒಳಗಾಗಿದ್ದಾರೆ. ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಮೇಲೆಯೂ ಕಣ್ಣಿಟ್ಟಿರುವ ಕೆಲ ಕಿಡಿಗೇಡಿಗಳು, ಯುವತಿಯರದ್ದು ಸೇರಿ ಕೆಲವರ ಖಾತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಅವರದ್ದೇ ಚಿತ್ರಗಳನ್ನು ಬಳಸಿಕೊಂಡು ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಆಪ್ತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಾರೆ. ಸ್ನೇಹಿತರಾದ ಕೂಡಲೇ ಮೊಬೈಲ್ ನಂಬರ್ ಪಡೆದು ವಾಟ್ಸಪ್, ಮೆಸ್ಸೆಂಜರ್ ಮೂಲಕ ಹಣ ಕೊಡುವಂತೆ ಪೀಡಿಸುತ್ತಾರೆ. ಯುವತಿಯರ ಮುಖದ ಚಿತ್ರಗಳನ್ನು ನಗ್ನಚಿತ್ರಕ್ಕೆ ಅಂಟಿಸಿ, ಅದನ್ನು ಆಯಾ ಯುವತಿಯರಿಗೆ ಕಳುಹಿಸಿ, ಮರ್ಯಾದೆ ಉಳಿಯಬೇಕಿದ್ದರೆ, ಹಣ ಕೊಡು ಎಂದು ಬೆದರಿಸುತ್ತಾರೆ. ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಲಾಗುತ್ತದೆ. ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ವಂಚಕರು ಹಣ ಎಗರಿಸುತ್ತಾರೆ.
ತನಿಖೆ ವಿಳಂಬಕ್ಕೆ ಕಾರಣ
ಹಣ ಕಳೆದುಕೊಂಡ ಗ್ರಾಹಕರ ಮಾಹಿತಿ ಬ್ಯಾಂಕ್ಗಳಿಂದ ತಡವಾಗಿ ಸಿಗುವುದರಿಂದ, ವಂಚಕರು ವರ್ಗಾಯಿಸಿಕೊಂಡ ಹಣ ಬೇರೆ ಖಾತೆಗೆ ಅಥವಾ ನಗದು ರೂಪದಲ್ಲಿ ಡ್ರಾ ಮಾಡಿರುತ್ತಾರೆ. ಬ್ಯಾಂಕ್ ಮಾಹಿತಿ ಮತ್ತು ಮೊಬೈಲ್ ನಂಬರ್ ಆಧರಿಸಿ ಸ್ಥಳಕ್ಕೆ ತೆರಳಿದಾಗ ಖಾತೆದಾರರ ಹೆಸರುಗಳು ದುರ್ಬಳಕೆ ಆಗಿರುವುದು ಗೊತ್ತಾಗುತ್ತದೆ. ವಂಚನೆಗೆ ಒಳಗಾದವರು ತಡವಾಗಿ ದೂರು ದಾಖಲಿಸುವುದರಿಂದ ಆರೋಪಿಗಳ ಕುರಿತು ಸಮರ್ಪಕ ಮಾಹಿತಿ ಸಿಗುವುದಿಲ್ಲ. ವಂಚನೆಗೆ ಒಳಗಾದ ಮೊದಲ ಒಂದು ಗಂಟೆ ಅವಧಿಯನ್ನು ಗೋಲ್ಡನ್ ಅವರ್ ಎನ್ನುತ್ತೇವೆ. ಆ ಅವಧಿಯಲ್ಲಿ ಸಂತ್ರಸ್ತರು ಮಾಹಿತಿ ನೀಡಿದರೆ ಹಣದ ಮರು ವಸೂಲಾತಿ ಅವಕಾಶ ಹೆಚ್ಚು. ಆದರೆ, ಶೇ. ೯೯ ರಷ್ಟು ಪ್ರಕರಣಗಳಲ್ಲಿ ಕೆಲವು ದಿನ-ವಾರಗಳ ನಂತರ ದೂರು ದಾಖಲಾಗುತ್ತಿದೆ. ಇದು ತನಿಖೆಯ ಹಿನ್ನಡೆಗೆ ಕಾರಣವಾಗುತ್ತದೆ ಎಂದು ಸೈಬರ್ ಪೊಲೀಸರು ಹೇಳುತ್ತಾರೆ.
೧೨.೩೬ ಕೋಟಿ ವಂಚನೆ
ಅವಳಿನಗರದಲ್ಲಿ ೨೦೨೨ ಮತ್ತು ೨೦೨೩ ರಲ್ಲಿ ಒಟ್ಟು ೧೨,೩೬,೭೪,೩೬೬ ರೂಪಾಯಿಗಳ ವಂಚನೆಯಾಗಿದೆ. ಇದರಲ್ಲಿ ೧,೭೧,೭೯,೬೩೩ ರೂಪಾಯಿಗಳನ್ನು ಪೊಲೀಸರು ಫ್ರೀಜ್ ಮಾಡಿಸಿದ್ದಾರೆ. ೨೦೨೨ ರಲ್ಲಿ ಒಟ್ಟು ೩೫೭ ಪ್ರಕರಣಗಳಲ್ಲಿ ೬,೦೯,೫೧,೩೭೫ ರೂಪಾಯಿ ಹಣ ಕಳೆದುಕೊಂಡಿದ್ದು, ಇದರಲ್ಲಿ ೭೮,೮೭,೨೮೩ ರೂಪಾಯಿ ಫ್ರೀಜ್ ಮಾಡಲಾಗಿದೆ. ೨೦೨೩ ರಲ್ಲಿ ೨೧೦ ಪ್ರಕರಣಗಳು ದಾಖಲಾಗಿದ್ದು, ೬,೨೭,೨೨,೯೯೧ ರೂಪಾಯಿ ವಂಚನೆಯಾಗಿದೆ. ಇದರಲ್ಲಿ ೯೨,೯೨,೩೫೦ ರೂಪಾಯಿ ಫ್ರೀಜ್ ಮಾಡಲಾಗಿದೆ.
ನಕಲಿಗಳ ಬಗ್ಗೆ ಎಚ್ಚರವಿರಲಿ
ಸೈಬರ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಶಾಲಾ-ಕಾಲೇಜು ಸೇರಿ ಸಂಘ ಸಂಸ್ಥೆಗಳನ್ನು ಒಳಗೊಂಡು ಕೆಲವು ತಿಂಗಳಲ್ಲಿ ೨೪೬ ಕ್ಕೂ ಹೆಚ್ಚು ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಗಿದೆ. ಸೈಬರ್ ಪ್ರಕರಣಗಳಲ್ಲಿ ಗೋಲ್ಡನ್ ಅವಧಿ ಮುಖ್ಯವಾಗಿದ್ದು, ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಇದಕ್ಕಾಗಿ ೧೯೩೦ ಸಹಾಯವಾಣಿಗೆ ಕರೆ ಮಾಡಬಹುದು. ಫ್ರೀಜ್ ಮಾಡಿದ ಹಣವನ್ನು ಮರಳಿಸಲು ಪೊಲೀಸ್ ಇಲಾಖೆ ಚುರುಕುತನದಿಂದ ಕಾರ್ಯ ಆರಂಭಿಸಿದೆ. ಸಾರ್ವಜನಿಕರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಜಾಗೃತರಾಗಿರಬೇಕು.
ರೇಣುಕಾ ಸುಕುಮಾರ, ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ.