ಸರ್ವಾನುಮತ ನಿರ್ಣಯಕ್ಕಿಂತ ಸುಪ್ರೀಂ ಮುಂದೆ ವಾದ ಮುಖ್ಯ

ಸಂಪಾದಕೀಯ
Advertisement

ನಮ್ಮಲ್ಲಿ ನೀರು ಬಿಡಲು ಸಂಗ್ರಹ ಇಲ್ಲ ಎಂದು ಸರ್ವಪಕ್ಷಗಳ ನಿರ್ಣಯ ಕೈಗೊಂಡರೆ ಸಾಲದು, ಸುಪ್ರೀಂ ಮುಂದೆ ಪರಿಣಾಮಕಾರಿ ವಾದ ಮಂಡನೆ ಅಗತ್ಯ. ಸುಪ್ರೀಂ ಕೋರ್ಟ್ ಜನರ ಕಣ್ಣೀರು ನೋಡುವುದಿಲ್ಲ. ಕಡತ ನೋಡುತ್ತದೆ.

ರಾಜ್ಯದ ಸರ್ವ ಪಕ್ಷಗಳ ಸಭೆ ಕಾವೇರಿಯಲ್ಲಿ ನೀರಿಲ್ಲ. ಅದರಿಂದ ಕಾವೇರಿ ನಿರ್ವಹಣಾ ಸಮಿತಿಯ ತೀರ್ಮಾನವನ್ನು ಪಾಲಿಸಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ. ಇದರಿಂದ ಉಪಯೋಗವೇನೂ ಆಗುವುದಿಲ್ಲ. ಸುಪ್ರೀಂ ಕೋರ್ಟ್‌ಗೆ ನಮ್ಮ ಅಸಹಾಯಕ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಅಂಕಿಅಂಶಗಳ ಮೂಲಕ ವಿವರಿಸಬೇಕು ಈ ವಿಷಯದಲ್ಲಿ ಒಡಕು ಧ್ವನಿ ಕೇಳಿಸಬಾರದು. ಈ ವಿಷಯದಲ್ಲಿ ನಮ್ಮ ರಾಜ್ಯದ ಜನಪ್ರತಿನಿಧಿಗಳು ತಮಿಳುನಾಡಿನ ಜನಪ್ರತಿನಿಧಿಗಳಿಂದ ಪಾಠ ಕಲಿಯಬೇಕು. ಅವರಲ್ಲಿ ಪಕ್ಷಭೇದ ಇದ್ದರೂ ಕಾವೇರಿ ವಿಷಯದ ಬಂದಾಗ ಎಲ್ಲರೂ ಒಂದುಗೂಡುತ್ತಾರೆ. ಇದಕ್ಕೆ ಅಲ್ಲಿಯ ಜನಸಾಮಾನ್ಯರ ರಾಜಕೀಯ ಇಚ್ಛಾಶಕ್ತಿ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮಲ್ಲಿ ಕಾವೇರಿ ಹೋರಾಟ ಕ್ಷೀಣಿಸುತ್ತಿದೆ. ರಾಜಕಾರಣಿಗಳಲ್ಲಿ ರಾಜಕೀಯ ಇಚ್ಛಾಶಕ್ತಿ ಕುಸಿಯುತ್ತಿದೆ. ಇದರಿಂದ ತಮಿಳುನಾಡು ಸರ್ಕಾರ ನ್ಯಾಯಾಲಯದ ಹೋರಾಟದಲ್ಲಿ ಸದಾಕಾಲ ಮುಂಚೂಣಿಯಲ್ಲಿರಲು ಸಾಧ್ಯವಾಗಿದೆ. ನಮ್ಮ ಜನಪ್ರತಿನಿಧಿಗಳು ನದಿ ನೀರಿನ ಸಮಸ್ಯೆ ಬಂದಾಗ ಮಾತನಾಡುವುದು ಸಂಕುಚಿತ ಮನೋಭಾವ ಎಂದು ಭಾವಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ತಮಿಳುನಾಡಿದ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಹೋರಾಟ ನಡೆಸುತ್ತಿದ್ದಾರೆ. ಇದರ ಪ್ರಭಾವದಿಂದ ನಾವು ಸತ್ಯದ ಮಾರ್ಗದಲ್ಲಿದ್ದರೂ ಅನ್ಯಾಯಕ್ಕೆ ಒಳಗಾಗಬೇಕಾಗಿ ಬಂದಿದೆ. ಸುಪ್ರೀಂ ಕೋರ್ಟ್ ಮುಂದೆ ನಮ್ಮ ರಾಜ್ಯದ ವಾದ ಮೊದಲಿನಿಂದಲೂ ಒಂದು ಹೆಜ್ಜೆ ಹಿಂದಿದೆಯೇ ಹೊರತು ಎಂದೂ ಮುಂಚೂಣಿಗೆ ಬಂದಿಲ್ಲ. ಉತ್ತಮ ವಕೀಲರನ್ನು ಹೊಂದಿದ್ದರೂ ನಮಗೆ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಲಭಿಸುತ್ತಿಲ್ಲ.
ಈಗ ಮಳೆ ಬಾರದೆ ೫೩ ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿದೆ. ಈ ನೀರಿನಲ್ಲೇ ಕುಡಿಯುವ ನೀರು, ಕೈಗಾರಿಕೆಗೆ ಹಾಗೂ ನೀರಾವರಿ ಅಗತ್ಯಗಳನ್ನು ಪೂರೈಸಬೇಕು. ಆದರೂ ಕಾವೇರಿ ನಿರ್ವಹಣಾ ಮಂಡಳಿಯ ನಿರ್ಧಾರಕ್ಕೆ ಬೆಲೆಕೊಟ್ಟು ನೀರನ್ನು ತಮಿಳುನಾಡಿಗೆ ಹರಿಸಿದ್ದೇವೆ. ಈಗ ಜಲಾಶಯ ಖಾಲಿಯಾಗುವ ಪರಿಸ್ಥಿತಿ ಬಂದಿದೆ. ನಮ್ಮ ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷ ಬಂದರೂ ರಾಜ್ಯದ ಹಿತ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಡಬ್ಬಲ್ ಎಂಜಿನ್ ಸರ್ಕಾರ ಇದ್ದರೆ ಅನುಕೂಲವಾಗುತ್ತದೆ ಎಂದಿದ್ದರು. ಏನೂ ಆಗಲಿಲ್ಲ. ಮೇಕೆದಾಟು ಯೋಜನೆಗೆ ಬ್ರಿಟಿಷರ ಕಾಲದಲ್ಲೇ ಅನುಮೋದನೆ ಸಿಕ್ಕಿತ್ತು. ಇನ್ನೂ ನಮಗೆ ಅದನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ ಎಂದರೆ ನಮ್ಮ ದೌರ್ಬಲ್ಯ ಎಷ್ಟಿದೆ ಎಂಬುದು ತಿಳಿಯುತ್ತದೆ. ರಾಜ್ಯ ಸಂಕಷ್ಟಕ್ಕೆ ಸಿಲುಕಿದಾಗ ಜನರ ಪರ ನಿಂತವರು ಎಸ್. ಬಂಗಾರಪ್ಪ ಮತ್ತು ಅಂಬರೀಷ್ ಮಾತ್ರ. ಈಗಲೂ ಕೇಂದ್ರದಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಸಚಿವರು ಇದ್ದಾರೆ. ಅವರು ಚಕಾರ ಎತ್ತಿಲ್ಲ. ಪ್ರಧನಿ ಬಳಿ ನಿಯೋಗ ಹೋಗಲು ಬರೆದಿರುವ ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ ಎನ್ನುತ್ತ ಕಾಲ ತಳ್ಳುತ್ತಿದ್ದೇವೆ. ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಸೂಕ್ತವಾಗಿ ಏಕೆ ಸ್ಪಂದಿಸುತ್ತಿಲ್ಲ ಎಂಬುದು ಅಂಗೈಹುಣ್ಣಿನಷ್ಟೇ ಸ್ಪಷ್ಟ. ಆ ಛಲ ಮತ್ತು ಬಲ ಪ್ರದರ್ಶನದಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಅದೇರೀತಿ ಪ್ರತಿಪಕ್ಷದಲ್ಲೂ ಒಗ್ಗಟ್ಟು ಕಂಡು ಬಂದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ತೆಗೆದುಕೊಳ್ಳುವ ತೀರ್ಮಾವೇ ಅಂತಿಮ. ನಮಗೆ ಒಕ್ಕೂಟ ವ್ಯವಸ್ಥೆ ಮೀರಿ ಹೋಗುವ ಮನಸ್ಸಿಲ್ಲ ಎಂಬುದು ನಿಜವಾದರೂ ನಮ್ಮ ಅಸಮಾಧಾನವನ್ನು ಸುಪ್ರೀಂ ಕೋರ್ಟ್ ಮುಂದೆ ವ್ಯಕ್ತಪಡಿಸಲು ಏಕೆ ಹಿಂಜರಿಕೆ ಎಂಬುದು ತಿಳಿಯುತ್ತಿಲ್ಲ. ಮೇಕೆದಾಟು ಸಮತೋಲನ ಜಲಾಶಯವಾಗಬಹುದು. ನದಿಯ ಕೆಳಪಾತ್ರದಲ್ಲಿರುವ ರಾಜ್ಯಗಳಿಗೆ ಕಾನೂನಿನಲ್ಲಿ ಅನುಕೂಲ ಹೆಚ್ಚು ಎಂಬ ವಾದವಿದ್ದರೂ ನಮ್ಮಲ್ಲಿ ನೀರನ್ನು ನ್ಯಾಯಬದ್ಧವಾಗಿ ಬಳಸಿಕೊಳ್ಳುವ ಜಾಣ್ಮೆಯೂ ಇಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ತಮಿಳುನಾಡು ಜಾಣತನದಿಂದ ಕಾವೇರಿಯ ಬಹುಪಾಲು ನೀರು ಬಳಸಿಕೊಳ್ಳುವುದರಲ್ಲಿ ಯಶಸ್ಸು ಕಂಡಿದೆ. ಈಗಲಾದರೂ ನಮ್ಮ ಜಡತ್ವವನ್ನು ಬಿಟ್ಟು ಮೈಕೊಡವಿಕೊಂಡು ಸುಪ್ರೀಂ ಮುಂದೆ ಪರಿಣಾಮಕಾರಿಯಾಗಿ ನೈಜ ಪರಿಸ್ಥಿತಿಯನ್ನು ಮಂಡಿಸಿ ಜಯಶೀಲರಾಗಬೇಕು.