ಬೆಳಗಾವಿ: ಪುತ್ರ ಮೃಣಾಲ್ ಹೆಬ್ಬಾಳ್ಕರ್ ಹುಲಿ ಉಗುರು ಧರಿಸಿರುವ ಪ್ರಕರಣಕ್ಕೆ ಸಬಂಧಿಸಿದಂತೆ ಅರಣ್ಯಾಧಿಕಾರಿಗಳು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸದಲ್ಲಿ ಬೆಳಗಾವಿ ಡಿಸಿಎಫ್ ಶಂಕರ್ ಕಲ್ಲೋಳಕರ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿ ಮಾತನಾಡಿದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಮಗ ಮೃಣಾಲ್ ಬಳಿ ಇರುವುದು ಪ್ಲಾಸ್ಟಿಕ್ ಉಗುರು. ಅದು ನಿಜವಾದ ಹುಲಿ ಉಗುರು ಅಲ್ಲ. ಮದುವೆ ಸಂದರ್ಭದಲ್ಲಿ ಯಾರೋ ಆತನಿಗೆ ಗಿಫ್ಟ್ ಕೊಟ್ಟಿದ್ದರು ಎಂದು ಹೇಳಿದರು.
ಈಗ ಒರಿಜಿನಲ್ ಹುಲಿ ಉಗುರು ಎಲ್ಲಿ ಸಿಗುತ್ತೆ? ಹುಲಿ ಉಗುರು, ಹುಲಿ ಚರ್ಮ ಇದೆಲ್ಲ ಈಗ ಸಿಗುವುದೂ ಇಲ್ಲ. ನನ್ನ ಮಗನ ಬಳಿ ಇರುವುದು ಒರಿಜಿನಲ್ ಹುಲಿ ಉಗುರು ಅಲ್ಲ. ಅಧಿಕಾರಿಗಳು ಬಂದಿದ್ದಾರೆ ಪರಿಶೀಲನೆ ಮಾಡುತ್ತಿದ್ದಾರೆ. ಅದು ನಿಜವಾದ ಹುಲಿ ಉಗುರು ಹೌದೋ ಅಲ್ಲವೋ ಎಂಬುದನ್ನು ನೋಡುತ್ತಾರೆ. ಕಾನೂನು ಎಲ್ಲರಿಗೂ ಒಂದೇ. ಸಚಿವರಾಗಿರುವ ನಮಗೂ ಒಂದೇ, ಸಾಮಾನ್ಯ ಜನರಿಗೂ ಒಂದೆ. ವನ್ಯಜೀವಿ ಸಂರಕ್ಷಣೆ ನಿಟ್ಟಿನಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ ನಾವೆಲ್ಲರೂ ಸಹಕಾರ ನೀಡುತೇವೆ ಎಂದು ಹೇಳಿದರು.
ಪೆಂಡೆಂಟ್ ವಶಕ್ಕೆ ಪಡೆದು ಅಧಿಕಾರಿಗಳು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರು ಹುಲಿ ಹುಗುರಿನ ಪೆಂಡೆಂಟ್ ಧರಿಸಿದ್ದರು. ಈ ಕುರಿತು ಫೋಟೊ ವೈರಲ್ ಆಗುತ್ತಿದ್ದಂತೆ ಮನೆಗೆ ಅರಣ್ಯಾಧಿಕಾರಿಗಳು ಆಗಮಿಸಿದ್ದಾರೆ. ಬೆಳಗಾವಿಯಲ್ಲಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಿವಾಸದಲ್ಲಿ ಮೃಣಾಲ್ ಅವರ ಹುಲಿ ಉಗುರಿನ ಲಾಕೆಟ್ ಅನ್ನು ಶೋಧ ನಡೆಸಿ ಪೆಂಡೆಂಟ್ ವಶಕ್ಕೆ ಪಡೆದಿದ್ದಾರೆ. ಹುಲಿ ಉಗುರು ಪತ್ತೆ ಮಾಡಿರುವ ಅರಣ್ಯಾಧಿಕಾರಿಗಳು, ಈ ಹುಲಿ ಉಗುರನ್ನು ಬೆಂಗಳೂರಿನ ಎಫ್ಎಸ್ಎಲ್ ರವಾನಿಸಲಿದ್ದೇವೆ. ಅದರ ವರದಿ ಬಂದ ನಂತರವೇ ಈ ಬಗ್ಗೆ ತಿಳಿಸುತ್ತೇವೆ. ಸದ್ಯ ಪ್ರಾಥಮಿಕ ಪರಿಶೀಲನೆ ನಡೆಸಿದ್ದೇವೆ. ಪೆಂಡೆಂಟ್ನಲ್ಲಿನ ಚಿನ್ನವನ್ನು ಮರಳಿ ಅವರೆ ನೀಡಿ, ಉಗುರು ಒಯ್ಯುತ್ತೇವೆ ಎಂದಿದ್ದಾರೆ
