ಹುಬ್ಬಳ್ಳಿ : ಮಹಾರಾಷ್ಟ್ರಕ್ಕೆ ತೆರಳುವ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಗಡಿ ಭಾಗದವರೆಗೆ ಮಾತ್ರ ಅಂದರೆ ನಿಪ್ಪಾಣಿಯವರೆಗೆ ಬಸ್ ಸಂಚರಿಸಲಿವೆ. ಅಲ್ಲಿಂದ ಗಡಿಯಾಚೆ ಮಹಾರಾಷ್ಡ್ರದ ಬಸ್ ಸಂಚರಿಸಲಿವೆ.
ಮಹಾರಾಷ್ಟ್ರದಲ್ಲಿ ಮೀಸಲಾತಿ ಹೋರಾಟ ತೀವ್ರಗೊಂಡು ಸೋಮವಾರ ರಾತ್ರಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ (ಕೆಕೆಆರ್ ಟಿಸಿ) ಬಸ್ ನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದರು.
ಅಲ್ಲದೇ ಮಹಾರಾಷ್ಡ್ರದ ಮೂವರು ಸಚಿವರು ಮತ್ತು ಓರ್ವ ಸಂಸದ ಕರ್ನಾಟಕ ರಾಜ್ಯೋತ್ಸವ ದಿನವೇ ಬೆಳಗಾವಿ ಆಗಮಿಸುವ ಪ್ರಯತ್ನ ನಡೆಸಿದ್ದರಿಂದ ಬೆಳಗಾವಿ ಜಿಲ್ಲಾಧಿಕಾರಿಗಳು ಅವರಿಗೆ ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಹೀಗಾಗಿ, ಪ್ರಕ್ಷುಬ್ಧ ವಾತಾವರಣ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ತಾತ್ಕಾಲಿಕವಾಗಿ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ರವಿವಾರ, ಸೋಮವಾರ ಮಹಾರಾಷ್ಟ್ರಕ್ಕೆ ತೆರಳಿದ ಬಸ್ ಗಳು ಬಹುತೇಕ ವಾಪಸ್ ಆಗಿವೆ. ಕಾರಣಾಂತರಗಳಿಂದ ಕೆಲ ಬಸ್ ಗಳಿಗೆ ಮಹಾರಾಷ್ಟ್ರ ಸಾರಿಗೆ ಡಿಪೋದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿವೆ.