ಬೆಳಗಾವಿ: ನನ್ನ ವಿರುದ್ಧದ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಜ. 28ರಂದು ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಮನವಿ ಮಾಡಿಕೊಳ್ಳುವುದಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರು ನನ್ನ ವೈಯಕ್ತಿಕ ಜೀವನವನ್ನು ಹಾಳು ಮಾಡಿದ್ದಾನೆ. ನಾನು ಗಟ್ಟಿಯಾಗಿ ನಿಂತು ಅದನ್ನೆಲ್ಲಾ ಎದುರಿಸಿ ಹೊರಗೆ ಬಂದಿದ್ದೇನೆ. ನನ್ನ ವಿರುದ್ಧ ಬಂದರೆ ನಾನೂ ಅವನ ವೈಯಕ್ತಿಕ ವಿಚಾರ ಮಾತನಾಡಬೇಕಾಗುತ್ತದೆ. ಡಿಕೆಶಿಗೆ ನನ್ನ ಭಯವಿದೆ. ನಾನು ಮನಸ್ಸು ಮಾಡಿದರೆ ಅವನನ್ನು ಮುಗಿಸುತ್ತೇನೆ ಎಂದು ಹೆದರಿಕೆ ಇರುವುದರಿಂದಲೇ ಹೀಗೆಲ್ಲಾ ಮಾಡುತ್ತಿದ್ದಾನೆ. ಇಂತಹ ನೂರು ಸಿಡಿ ಬಂದರೂ ನಾನೇನೂ ಹೆದರುವುದಿಲ್ಲ ಆದರೆ ಬೇರೆಯವರಿಗೆ ಈ ಸಂಕಷ್ಟ ಬರಬಾರದು. ಮಹಾನಾಯಕನ ಮುಖವಾಡ ಕಳಚುವ ತನಕ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಏಕವಚನದಲ್ಲಿಯೇ ಎಚ್ಚರಿಕೆ ನೀಡಿದರು.
ಸಿಡಿಯಲ್ಲಿ ಮಹಾನಾಯಕನ ಕೈವಾಡ ಇರುವುದಕ್ಕೆ ನನ್ನ ಬಳಿ ಸಾಕ್ಷಿ ಇದೆ. ನಲವತ್ತು ಕೋಟಿ ಖರ್ಚು ಮಾಡಿ ರಮೇಶ್ ಜಾರಕಿಹೊಳಿಯನ್ನು ಅದರಲ್ಲಿ ಸಿಕ್ಕಿಹಾಕಿಸಿದ್ದೇನೆ ಅನ್ನೋ ಸಾಕ್ಷಿ ಇದೆ. ಸ್ವತಃ ಅವನೇ ಮಾತನಾಡಿದ್ದಾನೆ. ರಮೇಶ್ ಜಾರಕಿಹೊಳಿ ನನ್ನ ಮಿತ್ರ. ಅವನಿಗೆ ಮಾಡಿದ್ದೇನೆ ಸಿಡಿ ಇಟ್ಟು ಕೆಲಸ ಮಾಡುತ್ತೇನೆ ಎಂದು ಆತ ಮಾತಾಡಿರುವ ಸಂಭಾಷಣೆ ಇದೆ. ಸಿಬಿಐ ತನಿಖೆಯಲ್ಲಿ ಎಲ್ಲವೂ ಬಯಲಾಗಲಿದೆ ಎಂದರು.