ಬಳ್ಳಾರಿ: ಒಂದು ಬಾರಿ ನೀವು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರ ತನ್ನಿ, ನಾವು ಈ ರಾಜ್ಯವನ್ನು ದಕ್ಷಿಣ ಭಾರತದ ಅಗ್ರ ಗಣ್ಯ ರಾಜ್ಯ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಸಂಡೂರು ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಎರಡೂ ಕುಟುಂಬ ರಾಜಕಾರಣ ಮಾಡುತ್ತಿವೆ. ಅವುಗಳಿಂದ ಅಭಿವೃದ್ಧಿ ಅಸಾಧ್ಯ. ಜೆಡಿಎಸ್ಗೆ ಕೊಟ್ಟ ಒಂದೊಂದು ಮತ ಕಾಂಗ್ರೆಸ್ ಮೂಲಕ ಸಿದ್ದರಾಮಯ್ಯ ಮತ್ತು ಎಟಿಎಂ ಭ್ರಷ್ಟ ಸರ್ಕಾರಕ್ಕೆ ಹೋಗುತ್ತದೆ ಎಂದು ಅವರು ಜರಿದರು.
ಒಂದು ಕಡೆ ಸುಭದ್ರ ಸರ್ಕಾರ ನೀಡುವ ಬಿಜೆಪಿ. ಇನ್ನೊಂದು ಕಡೆ ತುಕಡೆ ಗ್ಯಾಂಗ್ ರಾಹುಲ್ ನೇತೃತ್ವದಲ್ಲಿ ಇದೆ. ಯಾರಿಂದ ಈ ದೇಶ ಉದ್ಧಾರ ಸಾಧ್ಯ ಎಂಬುದು ನೀವೇ ಊಹಿಸಿ ಎಂದು ಅವರು ಪ್ರಶ್ನಿಸಿದರು.
ಈ ದೇಶ ಸುರಕ್ಷಿತವಾಗಿ ಇದ್ದು ಅಭಿವೃದ್ಧಿ ಆಗಬೇಕಾದರೆ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಪಾಕಿಸ್ತಾನ ಪದೇ ಪದೆ ನಮ್ಮ ಮೇಲೆ ದಾಳಿ ಮಾಡುತ್ತಿತ್ತು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಒಮ್ಮೆ ಪುಲ್ವಾಮಾ ದಾಳಿ ಆಯಿತು. ದಾಳಿಯ ಬೆನ್ನಲ್ಲೇ ನಮ್ಮ ಸೇನೆ ಸರ್ಜಿಕಲ್ ದಾಳಿ ಮೂಲಕ ಪಾಕಿಗಳ ಮನೆ ನುಗ್ಗಿ ಹೊಡೆಯಿತು ಎಂದು ಅವರು ತಿಳಿಸಿದರು.