ಬೆಂಗಳೂರು: ರಾಜ್ಯದಲ್ಲಿನ ಬಿಜೆಪಿ ಸರಕಾರ 40 ಪರ್ಸೆಂಟ್ ಕಮೀಷನ್ ಮೂಲಕ ಕೋಟಿ ಕೋಟಿ ಲೂಟಿ ಹೊಡೆದಿದೆ. ಈ ಮೂಲಕ ಜನರ ತೆರಿಗೆ ಹಣ ಲಂಚದ ರೂಪದಲ್ಲಿ ಕೆಲವರ ಜೇಬು ಸೇರುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ನಡೆದ ʻನಾ ನಾಯಕಿ’ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು. ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಕೇವಲ ಮೂರು ವರ್ಷಗಳ ಅವಧಿಯಲ್ಲಿ ಶೇ. 40 ಕಮೀಷನ್ ಮೂಲಕ 1.5 ಲಕ್ಷ ಕೋಟಿ ಲೂಟಿ ಮಾಡಲಾಗಿದೆ. ನೇಮಕಾತಿ, ವರ್ಗಾವಣೆ, ವಾಹನ ಲೈಸನ್ಸ್ನಲ್ಲೂ ಲಂಚ ಹೀಗೆ ಪ್ರತಿಯೊಂದರಲ್ಲಿ ದುಡ್ಡು ಹೊಡೆಯುವುದೇ ಬಿಜೆಪಿ ಕೆಲಸವಾಗಿದೆ. ಅಲ್ಲದೇ ಮಕ್ಕಳ ಕಲಿಕೆಯ ಪಠ್ಯಕ್ರಮಕ್ಕೂ ಕೈ ಹಾಕಿ ಮಕ್ಕಳ ಭವಿಷ್ಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.