ಹುಬ್ಬಳ್ಳಿ: ಸರಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ, ಓಪಿಎಸ್ ಜಾರಿಗೆ ಆಗ್ರಹಿಸಿ ಮಿನಿ ವಿಧಾನಸೌಧ ಮತ್ತು ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು. ಪಾಲಿಕೆ ಸಿಬ್ಬಂದಿ ಕಾರ್ಯನಿರ್ವಹಣೆ ಹಿನ್ನೆಲೆ ಸರಕಾರಿ ನೌಕರರ ಸಂಘದಿಂದ ಪಾಲಿಕೆ ಅವರಣದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪಾಲಿಕೆ ಸಿಬ್ಬಂದಿ ಮೇಲೆ ಒತ್ತಡ ಆರೋಪದ ಮೇಲೆ ಪಾಲಿಕೆ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ ಚೇಂಬರ್ ಗೆ ನುಗ್ಗಿ ಪ್ರತಿಭಟನೆ ನಡೆಸಲಾಯಿತು. ಅಧಿಕಾರಿಯ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿ, ಕರ್ತವ್ಯಕ್ಕೆ ಹಾಜರಾಗುವಂತೆ ಪಾಲಿಕೆ ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟಿದ್ದೀರಿ. ಇದು ಸರ್ಕಾರಿ ನೌಕರರ ಹೋರಾಟಕ್ಕೆ ಮಾಡುತ್ತಿರುವ ಅಪಮಾನ. ಕರ್ತವ್ಯಕ್ಕೆ ಗೈರಾಗೋ ಮೂಲಕ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿ ಎಂದು ಒತ್ತಡ ಹಾಕಿದರು. ಹಣಕಾಸು ಇಲಾಖೆ ಸೇರಿ ವಿವಿಧ ಇಲಾಖೆಗಳ ಬಳಿ ಪ್ರತಿಭಟನೆ ನಡೆಸಲಾಯಿತು. ನಂತರ ಎಲ್ಲ ಕಚೇರಿಗಳು ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು.