ಚುನಾವಣೆ ಬಳಿಕ ಹೆಚ್‌ಡಿಕೆ-ಸಿದ್ದು ತೀರ್ಥಯಾತ್ರೆಗೆ

ಆರ್. ಅಶೋಕ್
Advertisement

ಚಿಕ್ಕಮಗಳೂರು: ಮಾಜಿ ಸಿಎಂ ಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೆ ಇದು ಜೀವನದ ಕೊನೆಯ ಚುನಾವಣೆ. ಈ ಚುನಾವಣೆ ಮುಗಿಯುತ್ತಿದ್ದಂತೆ ಅವರು ಗಂಟು ಮೂಟೆ ಕಟ್ಟಿಕೊಂಡು ಸೀದಾ ತೀರ್ಥಯಾತ್ರೆಗೆ ಹೋಗಬೇಕು. ಅದಕ್ಕೆ ನಾನು ಶುಭ ಕೋರುತ್ತೇನೆ ಎಂದು ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಹುಲಿಕೆರೆ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ನಂತರ ಭಾನುವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್, ಜೆಡಿಎಸ್‌ಗೆ ಇದು ಕೊನೆ ಚುನಾವಣೆ. ಸೋಲಿನ ಭಯ ಕಾಡಲು ಆರಂಭವಾದಾಗ ಮಾತಿನ ಮೇಲೆ ಹಿಡಿತ ಇರೋದಿಲ್ಲ. ಈ ಪಕ್ಷದ ನಾಯಕರಿಗೆ ಮೋದಿ, ಬಿಜೆಪಿ ಕನಸು ಬೀಳುತ್ತಿದೆ. ಅವರ ಮಾತು ಕೇಳುತ್ತಿರುವ ಜನರಿಗೆ ಗೊತ್ತಾಗಿದೆ ಇವರು ಭಯದಲ್ಲಿದ್ದಾರೆಂದು. ಹೀಗಾಗಿ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ಮೊದಲು ತಮ್ಮ ಮನೆ ಜಗಳ ಬಗೆಹರಿಸಿಕೊಳ್ಳಲಿ ಎಂದರು.
ದಿನ ನಿತ್ಯ ಮಾಧ್ಯಮದಲ್ಲಿ ಇವರಿಬ್ಬರ ಜಗಳ ನೋಡುತ್ತಿದ್ದೇವೆ. ಇಬ್ಬರೂ ಒಟ್ಟಿಗೆ ಬಸ್ ಯಾತ್ರೆಯಲ್ಲಿ ಹೋದಾಗ ಒಬ್ಬರು ಆ ಕಡೆ ಮುಖ, ಇನ್ನೊಬ್ಬರು ಈ ಕಡೆ ಮುಖ. ಈಗ ಇಬ್ಬರೂ ಬೇರೆ ಬೇರೆ ಯಾತ್ರೆ ಮಾಡುವಾಗ ಉತ್ತರ-ದಕ್ಷಿಣ ಆಗಲಿದೆ. ಇದಕ್ಕೆ ಶುಭ ಕೋರುತ್ತೇನೆ. ನೀವು ಉತ್ತರಕ್ಕೆ ಒಬ್ಬರು, ದಕ್ಷಿಣಕ್ಕೆ ಒಬ್ಬರು ಇರಿ, ನೀವು ಬರೋದು ಬೇಡ ಎಂದು ವ್ಯಂಗ್ಯವಾಡಿದರು.