ಬಾಗಲಕೋಟೆ: ದೇಶದಲ್ಲಿ ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ಮಾದರಿ ಸರ್ಕಾರಗಳನ್ನು ಜನತೆ ಒಪ್ಪಿಕೊಂಡಿವೆ. ಅದರಂತೆ ದಕ್ಷಿಣ ಭಾರತದಲ್ಲಿ ಈ ಭಾರಿ ವಿಧಾನಸಭಾ ಚುನಾವಣೆಗೆ ಕರ್ನಾಟಕವು ಹೆಬ್ಬಾಗಿಲಾಗಿ ಆಡಳಿತಕ್ಕೆ ಬರುವ ಮೂಲಕ ಭ್ರಷ್ಟಾಚಾರದ ಎರಡು ಮುಖಗಳನ್ನು ಹೊಂದಿರುವ ಬಿಜೆಪಿ, ಕಾಂಗ್ರೆಸ್ಗೆ ಪರ್ಯಾಯ ಪಕ್ಷವಾಗಿ ಆಪ್ ಅನಿವಾರ್ಯವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬಾಗಲಕೋಟೆ ಜಿಲ್ಲಾಧ್ಯಕ್ಷ ಕೆ.ಎಂ. ಕಲಾದಗಿ ತಿಳಿಸಿದರು.
ರಬಕವಿ-ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೇರದಾಳ ಕ್ಷೇತ್ರದಲ್ಲಿ ಮೂರು ಬಾರಿ ಬಿಜೆಪಿಯ ಸಿದ್ದು ಸವದಿ ಹಾಗೂ ಒಂದು ಬಾರಿ ಉಮಾಶ್ರೀಯವರು ಸಚಿವರಾಗಿ ಆಯ್ಕೆಗೊಂಡರೂ ಸಹಿತ ಶಿಕ್ಷಣ, ವೈದ್ಯಕೀಯ, ಆಸ್ಪತ್ರೆ, ನೇಕಾರಿಕೆ, ಉದ್ಯೋಗ ಹಾಗೂ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಕಿಂಚಿತ್ತೂ ಸಹಾಯ ಮಾಡಿಲ್ಲ. ಬದಲಾಗಿ ಭ್ರಷ್ಟಾಚಾರದಿಂದ ತಮ್ಮ ಸ್ವಂತ ಬೊಕ್ಕಸವನ್ನೇ ಮಾಡಿಕೊಂಡಿದ್ದು, ಮತದಾರರಿಗೆ ಭಾರಿ ಅನ್ಯಾಯವೆಸಗಿದ್ದಾರೆಂದು ಕಲಾದಗಿ ಗಂಭೀರವಾಗಿ ಆರೋಪಿಸಿದರು. ಉಭಯ ಪಕ್ಷಗಳು ಮತಕ್ಕಾಗಿ ಏನೆಲ್ಲ ಲಾಬಿಗಳನ್ನು ನಡೆಸುತ್ತ ಶ್ರೀಸಾಮಾನ್ಯರನ್ನು ಹಣದ ಮೂಲಕ ಸೆಳೆಯುವ ತಂತ್ರ ಹೂಡುವರು. ಇದ್ಯಾವುದಕ್ಕೂ ಜಗ್ಗದೆ ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಆಪ್ ಪಕ್ಷವನ್ನು ಜನತೆ ಬಯಸುತ್ತಿದ್ದಾರೆಂದು ಕಲಾದಗಿ ತಿಳಿಸಿದರು.