ಭಾರತ ಜೋಡೋದಿಂದ ಬಿಜೆಪಿಗೆ ಹಿನ್ನಡೆ ಇಲ್ಲ: ಜೋಶಿ

ಪ್ರಲ್ಹಾದ್ ಜೋಶಿ
Advertisement

ಹುಬ್ಬಳ್ಳಿ: ಭಾರತ ಜೋಡೋದಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದ ಇಂದಿರಾಗಾಜಿನ ಮನೆಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ಯಂತ ಕಾಂಗ್ರೆಸ್ ನೆಲಕಚ್ಚಿದೆ. ಬದಲಾಗಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಆರೋಗ್ಯ ಸುಧಾರಣೆ ಆಗಬಹುದು ಎಂದು ಟಾಂಗ್ ಕೊಟ್ಟರು.
ವಿಶ್ವಕ್ಕೆ ಅತ್ಯುತ್ತಮ ಗ್ರಂಥವನ್ನು ಮಹರ್ಷಿ ವಾಲ್ಮೀಕಿ ಅವರು ಕೊಟ್ಟಿದ್ದಾರೆ. ನೈಜ ಘಟನೆಯನ್ನು ರಾಮಾಯಣದಲ್ಲಿ ಚಿತ್ರಿಸಿದ್ದು ವಾಲ್ಮೀಕಿ. ಹೀಗಾಗಿ ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಮಾಡಿರುವುದು ಐತಿಹಾಸಿಕ. ಈ ಮೂಲಕ ಬಿಜೆಪಿ ದಿನ ದಲಿತರ ಬಡವರ ಪರವಾದ ಪಕ್ಷ ಎಂದು ಸಾಬೀತು ಆಗಿದೆ ಎಂದರು.
ಕಾಂಗ್ರೆಸ್ ದಲಿತರನ್ನು ಮತ ಬ್ಯಾಂಕ್ ಆಗಿ ತಿಳಿದುಕೊಂಡಿತ್ತು. ಕಾಂಗ್ರೆಸ್ ಹಿಂದುಳಿದವರ ಕಲ್ಯಾಣ ಮಾಡಲಿಲ್ಲ. ಇದೇ ಕಾರಣಕ್ಕೆ ದಲಿತರ ಸ್ಥಿತಿ ಹೀನಾಯವಾಗಿದೆ. ಇದೀಗ ಮೀಸಲಾತಿ ಹೆಚ್ಚಿಸಿ ಮಹತ್ತರ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ, ಸಚಿವರು ಹಾಗೂ ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.