ಹುಬ್ಬಳ್ಳಿ : ಇಲ್ಲಿನ ಉಣಕಲ್ ಕ್ರಾಸ್ ನಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನ ಇರುವ ಸಿಟಿಎಸ್ ನಂಬರ್ 3448 ಜಾಗೆಯನ್ನು ಬಿಆರ್ ಟಿಎಸ್ ಕಂಪನಿ ಗುರುವಾರ ಬೆಳಿಗ್ಗೆ ತನ್ನ ಸುಪರ್ದಿಗೆ ಪಡೆಯಿತು.
ಈ ಜಾಗ ಬಿಆರ್ ಟಿಎಸ್ ಕಂಪನಿ ಒಡೆತನಕ್ಕೆ ಸೇರಿದೆ. ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ ಎಂದು ಸೂಚನಾ ಫಲಕವನ್ನು ದೇವಸ್ಥಾನದ ಮುಂಬಾಗಿಲಿಗೆ ಅಂಟಿಸಲಾಗಿದೆ.
ಬೆಳ್ಳಂ ಬೆಳಿಗ್ಗೆ ದೇವಸ್ಥಾನದಲ್ಲಿ ಯಾರೂ ಇರಲಿಲ್ಲ. ಈ ವೇಳೆ ಸುಮಾ 8 ಗಂಟೆ ಹೊತ್ತಿಗೆ ಸಹಾಯಕ ಆಯುಕ್ತ ಝುಬೇರ್ ಅಹ್ಮದ್ ಹಾಗೂ ಬಿಆರ್ ಟಿಎಸ್ ಅಧಿಕಾರಿಗಳು ರಾಮಲಿಂಗೇಶ್ವರ ದೇವಸ್ಥಾನದ ಬಾಗಿಲು ಮುಚ್ಚಿ ಅದಕ್ಕೆ ನೋಟಿಸ್ ಅಂಟಿಸಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದರು.ಈ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸ್ ಮೀಸಲು ಪಡೆಯ ಒಂದು ವ್ಯಾನ್ ನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ

ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ದೇವಸ್ಥಾನದ ಭಕ್ತರು, ದೇವಸ್ಥಾನ ಸಮಿತಿಯವರು, ಉಣಕಲ್ ಗ್ರಾಮಸ್ಥರು ಸ್ಥಳಕ್ಕೆ ಧಾವಿಸುತ್ತಿದ್ದಾರೆ.
ರಾಮಲಿಂಗೇಶ್ವರ ದೇವಸ್ಥಾನ ಉಣಕಲ್ ಗ್ರಾಮದ ಹಳೆಯ ದೇವಸ್ಥಾನವಾಗಿದೆ. ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ನೂರಾರು ವರ್ಷಗಳಿಂದ ಗ್ರಾಮದ ಭಕ್ತರು ಆರಾಧಿಸಿಕೊಂಡು ಬಂದಿದ್ದಾರೆ. ಈಚೆಗೆ ನಗರ ಬೆಳೆದಂತೆ ಈ ದೇವಸ್ಥಾನ ರಸ್ತೆಯ ಮಧ್ಯೆದಲ್ಲಿ ಸೇರಿಕೊಂಡಿತು. ಇದೇನು ಹೊಸದಾಗಿ ಕಟ್ಟಿದ ದೇವಸ್ಥಾನವಲ್ಲ. ಬಿಆರ್ ಟಿಎಸ್ ಬಂದಿದ್ದು ಈಚೆಗೆ, ಯೋಜನೆ ಹೆಸರಲ್ಲಿ ದೇವಸ್ಥಾನ ಸುಪರ್ದಿಗೆ ಪಡೆಯುವುದು ಭಕ್ತರ ಭಾವನೆಗೆ ಧಕ್ಕೆಯಾಗಲಿದೆ. ಈಗಿರುವ ಸ್ಥಿತಿಯಿಂದ ಏನೂ ಸಮಸ್ಯೆ ಇರಲಿಲ್ಲಮ ದೇವಸ್ಥಾನದ ಮೇಲ್ಭಾಗದಲ್ಲಿ ಫ್ಲೈ ಒವರ್ ನಲ್ಲಿ ಬಿಆರ್ ಟಿಎಸ್ ಬಸ್ ಸಂಚರಿಸುತ್ತವೆ. ಆದಾಗ್ಯೂ ಬಿಆರ್ ಟಿಎಸ್ ಕಂಪನಿ ದೇವಸ್ಥಾನದ ಜಾಗೆ ತನ್ನದೇ ಎಂದು ಹಠಕ್ಕೆ ಬಿದ್ದು ಸುಪರ್ದಿಗೆ ಪಡೆಯಲು ಮುಂದಾಗಿದ್ದು ಖಂಡನೀಯ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.