ಹುಬ್ಬಳ್ಳಿ: ನಾಡಿನ ಮತದಾರರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪರ ಇದ್ದಾರೆ. ʻಕಾಂಗ್ರೆಸ್ ಎಷ್ಟೇ ತಿಪ್ಪರಲಾಗ ಹಾಕಿದರೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್’ನವರು ಭಾರತ ಜೊಡೋ ಮಾಡಲಿ, ರಥಯಾತ್ರೆಯೇ ನಡೆಸಲಿ. ಅಥವಾ ಎಷ್ಟೇ ಕಾರ್ಯತಂತ್ರ ರೂಪಿಸಿದರೂ ಅಧಿಕಾರಕ್ಕೆ ಬರಲು ಮಾತ್ರ ಸಾಧ್ಯವಿಲ್ಲ’ ಎಂದರು.
‘ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸಲು ಸೆ. 22ರಂದು ನಾನು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು. ಬಳ್ಳಾರಿ ವಿಮ್ಸ್’ನಲ್ಲಿ ನಡೆದ ರೋಗಿಗಳ ಸಾವು ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ‘ತನಿಖೆ ನಡೆಯುತ್ತಿದೆ, ನೋಡೋಣ’ ಎಂದರು.